Wednesday, September 23, 2009

ಸರಿ, ಮಕ್ಕಳೆಷ್ಟು!

ಮನೆಮನೆಗೆ ತೆರಳಿ ಜನಗಣತಿ ಮಾಡುವಾಕೆಗೆ ಆಕೆಯೊಬ್ಬಳು ಎದುರಾದಳು.

“ಮೇಡಂ ಜನಗಣತಿಗೆ ನಿಮ್ಮ ವಿವರವನ್ನು ಸೇರಿಸಿಕೊಳ್ಳಬೇಕಿತ್ತು.”

“ಏನು ಬೇಕಿತ್ತು ಕೇಳಿ...”

“ನಿಮ್ಮ ಹೆಸರು?”

“ಸಿಸ್ಟರ್ ಇಸಾಬೆಲ್”

“ಮದುವೆಯಾಗಿದೆಯಾ?”

ತುಸು ಯೋಚಿಸಿ ಆ ನನ್ ಉತ್ತರಿಸಿದಳು, “ಹು, ಜೀಸಸ್‌ನೊಂದಿಗೆ”

ಜನಗಣತಿಯಾಕೆ ಯಾಂತ್ರಿಕವಾಗಿ ಪ್ರಶ್ನಿಸಿದಳು, “ಸರಿ, ಎಷ್ಟು ಮಕ್ಕಳು?”

ಸಿಸ್ಟರ್ ಆಸ್ಪತ್ರೆಯ ಸಿಸ್ಟರ್‌ನ ಭೇಟಿ ಮಾಡುವವರೆಗೂ ಎಚ್ಚರವಾಗಲಿಲ್ಲ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕೆ?

Thursday, September 17, 2009

ನೀವೇ ಬದಲಿಸಿಕೊಳ್ಳಿ!

ಒಂದು ಹಡಗು ಸಮುದ್ರ ಮಧ್ಯದಲ್ಲಿ ಚಲಿಸುತ್ತಿದೆ. ಆ ದೇಶದ ರಾಜರು ಅದರಲ್ಲಿ ಪಯಣಿಸುತ್ತಿದ್ದಾರೆ. ಹಡಗು ಬಣ್ಣಬಣ್ಣದ ಲೈಟುಗಳಿಂದ ಮಿರಿಮಿರಿ ಮಿನುಗುತ್ತಿದೆ. ಆಗ ರಾತ್ರಿಯಾಗಿತ್ತು. ಹಡಗಿನ ಕ್ಯಾಪ್ಟನ್ ಗೆ ದೂರದಲ್ಲೊಂದು ಮಿಣುಕು ದೀಪ ಕಾಣಿಸುತ್ತದೆ. ಕೂಡಲೇ ಅದಕ್ಕೆ ಸಂದೇಶ ರವಾನಿಸುತ್ತಾನೆ. "ನಿಮ್ಮ ಹಡಗಿನ ದಿಕ್ಕನ್ನು ಬದಲಿಸಿಕೊಳ್ಳಿ.." ಅದಕ್ಕೆ ಉತ್ತರವಾಗಿ.."ಇಲ್ಲ, ನೀವೇ ದಿಕ್ಕನ್ನು ಬದಲಿಸಿಕೊಳ್ಳಬೇಕು." ಎಂದು ಬರುತ್ತದೆ.

ಕ್ಯಾಪ್ಟನ್ ಅಸಹನೆಯಿಂದ,"ಈ ದೇಶದ ರಾಜರೇ ಹಡಗಿನಲ್ಲಿದ್ದಾರೆ, ದಿಕ್ಕು ಬದಲಿಸಿಕೊಂದರೆ ಒಳ್ಳೆಯದು".

ಇದಕ್ಕೂ ಅತ್ತ ಕಡೆಯಿಂದ ಬರುವ ಉತ್ತರ, "ನಿಮಗೆ ಕಷ್ಟವಾಗಬಹುದು, ಆದರೆ ವಿಧಿಯಿಲ್ಲ, ನೀವೇ ದಿಕ್ಕನ್ನು ಬದಲಿಸಿಕೊಳ್ಳಿ!" ಎಂದೇ!

ಕೋಪಾವಿಷ್ಟನಾದ ಕ್ಯಾಪ್ಟನ್, ಕೂಡಲೇ ರಾಜರತ್ತ ಧಾವಿಸಿ ಇದೆಲ್ಲವ ವಿವರಿಸಿ, ಅವರ ಆಜ್ಞೆ ಪಡಕೊಳ್ಳುತ್ತಾನೆ, ನಂತರ "ನೀವು ದಿಕ್ಕನ್ನು ಬದಲಿಸಿಕೊಳ್ಳಲೇಬೇಕು, ಇದು ರಾಜನ ಆಜ್ಞೆ!" ಅಂತ ಕಳಿಸುತ್ತಾನೆ.
ಅತ್ತ ಕಡೆಯಿಂದ ಹೀಗೆ ಉತ್ತರ ಬರುತ್ತದೆ.

"ನೀವು ದಿಕ್ಕು ಬದಲಿಸಿಕೊಳ್ಳಲೇಬೇಕು, ಇದು ಲೈಟ್ ಹೌಸ್!"


(ಸಂಗ್ರಹದಿಂದ)

Saturday, May 9, 2009

ನೀವು ನಕ್ಕರೆ.. ಕಾಫಿಗೆ ಬೇಡ ಸಕ್ಕರೆ!

ನಗೆಸಾಮ್ರಾಟರು ಹೆಂಡತಿಗೆ ಫೋನ್ ಮಾಡಿದರು,"ಇವತ್ತು ಮನೆಗೆ ಬರಲಿಕ್ಕೆ ಆಗಲ್ಲ, ಕಾರಿನ ಗೇರ್, ಸ್ಟೀರಿಂಗ್ ಎಲ್ಲಾ ಕಳವಾಗಿದೆ.." ಎಂದು.

ಆದರೆ ಐದು ನಿಮಿಷದ ಬಳಿಕ ಮತ್ತೆ ಫೋನ್ ಮಾಡಿ.."ಬರ್ತಿದ್ದೇನೆ, ಮೊದಲು ಮಿಸ್ಸಾಗಿ ಕಾರಿನ ಹಿಂದಿನ ಸೀಟ್ ನಲ್ಲಿ ಕುಳಿತುಬಿಟ್ಟಿದ್ದೆ.." ಅಂದರು.

******


ಸರ್: ಯಾಕ್ಲೇ ಗುಂಡಾ..ಮುಂದ ಇನ್ ಶರ್ಟ್ ಮಾಡಿ ಹಿಂದಾ ಹೊರಗಾ ಬಿಟ್ಟಿದೀಯಲ್ಲಾ?

ಗುಂಡ: "ಮುಂದ ಅಂಗಿ ಹರ್ದೆತ್ರಿ... ಹಿಂದ ಪ್ಯಾಂಟ್ ಹರ್ದೆತ್ರಿ.. ಅದಕ್ಕೆ ರಿ ಸರ..."


*****

ರಿಸೆಷನ್ ಟೈಮ್ ನಲ್ಲಿ ಕಂಪನಿಯೊಂದು ಬಳಸಬಹುದಾದ ತಂತ್ರ.
ಟಿಶ್ಯೂ ಪೇಪರ್ ನ ಬದಲು ಹೊಸತಾಗಿ ಕಾಲೇಜು ಮುಗಿಸಿದವರು ಕೆಲಸಕ್ಕಾಗಿ ನೀಡಿದ ರೆಸ್ಯೂಮ್ ಬಳಸುವುದು!


*********

ನಗೆಸಾಮ್ರಾಟರು ಸಲೂನ್ ಗೆ ಹೋದಾಗ ನಡೆದ ಘಟನೆ.
ಅಲ್ಲಿಗೆ ಒಬ್ಬ ನೋಡಲು ಒಂದು ಆಂಗಲ್ ನಲ್ಲಿ ಗಾಂಧಿಯಂತೆ ಕಾಣುತ್ತಿದ್ದ ವ್ಯಕ್ತಿ ಬಂದ ತಲೆಯಲ್ಲಿ ಯಾವ ಕಡೆಯಿಂದ ಕೂಡಿಸಿದರೂ ಒಂಭತ್ತಕ್ಕಿಂತ ಹೆಚ್ಚು ಕೂದಲು ಕಾಣ್ತಿಲ್ಲ. ಅವನ ತಲೆ ನೋಡಿ ಸಿಟ್ಟಾದ ಸಲೂನಿನ ಬಿಲ್ಲು, " ಏನ್ಸಾರ್ ಕೌಂಟ್ ಮಾಡಲಾ? ಕಟ್ ಮಾಡಲಾ?" ಎಂದು ಕೇಳಿದ್ದಕ್ಕೆ

ಆ ವ್ಯಕ್ತಿ ವಿನಮ್ರತೆಯಿಂದ.."ಕಲರ್ ಮಾಡು.." ಅಂದ!
ನೋಡಿ ಸಾಮ್ರಾಟರು ಸುಸ್ತು.


******


ಸಾಮ್ರಾಟರ ಮಗನಿಗೆ ಶಾಲೆಯಲಿ ರೇಸ್ ಬಗ್ಗೆ ಬರೆಯಲು ಹೇಳಿದ್ದರು. ಅದನ್ನು ಒಂಚೂರೂ ಎಡಿಟ್ ಮಾಡದೇ ಇಲ್ಲಿ ನೀಡುತ್ತಿದ್ದೇವೆ.
"ಅದು ಇರುವೆಗಳ ಸೈಕಲ್ ರೇಸು. ಕುಂದಾಪುರದಿಂದ ಶುರುವಾದ ರೇಸು ಮುಗಿಯುವುದು ಉಡುಪಿಯಲಿ. ಒಂದು ಇರುವೆಯು ಇಲ್ಲದ ಗೇರನ್ನು ಕಲ್ಪಿಸಿಕೊಳ್ಳುತ್ತ ಸೈಕಲ್ ನ್ನು ಪಲ್ಸಾರ್ ತರಹ ಓಡಿಸುತ್ತಿತ್ತು. ಆಗ ಅಲ್ಲಿಗೆ ಸೈಟ್ ಸೀಯಿಂಗ್ ಗೆ ಬಂದ ಆನೆ ದಾರಿಗಡ್ಡವಾದಾಗ ಸಡನ್ನಾಗಿ ಬ್ರೇಕ್ ಹಾಕಿದ ಇರುವೆಯು .." ಅಡಿಕ್ ಬೂರ್ದು ಸೈಪನ ಮರೆ..!" (ಅಡಿಗೆ ಬಿದ್ದು ಸಾಯ್ತೀಯ ಮಾರಾಯ) ಅಂದಿತು.

ಮಗನ ಕಲ್ಪನೆಗಳ ಬಗ್ಗೆ ಹೆಮ್ಮೆ ಪಟ್ಟ ಸಾಮ್ರಾಟರು ಎಲ್ಲೆಡೆ ಹೇಳಿಕೊಂಡು ತಿರುಗುತ್ತಿದ್ದರೆ, ಮಗರಾಯ ’ಅಪ್ಪ ಹೀಗೆ ಹೇಳ್ತಾ ಇದ್ದರೆ ಆನೆ ಮರ್ಯಾದೆ ಏನಾಗಬೇಕಂತ’ ಆಲೋಚಿಸಿ ಆನೆಯನ್ನೇ ಹೀರೋ ಆಗಿಸಿ ಏನೋ ಬರೆಯುತ್ತಿದ್ದಾನಂತೆ!

*****

ಈ ಸಲ ಇಂಕ್ರಿಮೆಂಟು ನೀಡದ್ದಕ್ಕೆ ಸಿಟ್ಟಾದ ನಗೆಸಾಮ್ರಾಟರು ತನ್ನ ಬಾಸ್ ಗೆ ಧಮಕಿ ಹಾಕಿದ್ದು ಹೇಗೆ ಗೊತ್ತೆ?
" ಈ ತಿಂಗಳು ನನ್ನ ಸಂಬಳ ಹೆಚ್ಚು ಮಾಡದಿದ್ದರೆ, ಆಫೀಸಿನ ಎಲ್ಲರಿಗೂ ನೀವು ನನಗೆ ಇಂಕ್ರಿಮೆಂಟ್ ಕೊಟ್ಟಿರೆಂದು ಸುದ್ಧಿ ಹಬ್ಬಿಸುತ್ತೇನೆ..!"

*****

ಕಳೆದ ಸಲ ನಗೆ ಸಾಮ್ರಾಟರು ಅಮೇರಿಕಾಗೆ ಹೋಗಿದ್ದಾಗ ಅಲ್ಲೊಂದು ಮೆಶೀನ್ ನೋಡಿದರು. ಅದು ಕಳ್ಳರನ್ನು ಹಿಡಿವ ಯಂತ್ರವಾಗಿತ್ತು. ಅಲ್ಲೇ ಸಾಕ್ಷಾತ್ ಅವರ ಕಣ್ಣೆದುರೇ ಘಂಟೆ ೧೦ ಲೆಕ್ಕದಲ್ಲಿ ಕಳ್ಳರನ್ನು ಹಿಡಿಯಿತು. ಖುಷ್ ಆದ ಸಾಮ್ರಾಟರು ಭಾರಿ ಮೊತ್ತ ತೆತ್ತು ಕರ್ನಾಟಕದ ಪೋಲೀಸರಿಗೆ ತೋರಿಸುತ್ತೇನೆ ಅಂತ ಹೇಳಿಕೊಳ್ಳುತ್ತಿದ್ದರು.

ಆದರೆ ಇಲ್ಲಿ ಇಟ್ಟ ಮಾರನೇ ದಿನವೇ ಮೆಶೀನ್ ಕಳುವಾಯಿತಂತೆ.

*****

ಭೀಮನು ಧುರ್ಯೋದನನನ್ನು ಹೇಗೆ ಕೊಂದನು?
ಒಂದು ಮಾರ್ಕ್ಸಿನ ಪ್ರಶ್ನೆಯಾದರೆ ಸಾಮ್ರಾಟರ ಮಗ ಅಷ್ಟು ತಲೆತುರಿಸಿಕೊಳ್ಳುತ್ತಿರಲಿಲ್ಲ. ಅಷ್ಟು ದಡ್ಡನೆಂದು ತಿಳಿದಿರೇ? ಆ ಪ್ರಶ್ನೆ ೧೫ ಅಂಕಕ್ಕೆ ಕೇಳಲ್ಪಟ್ಟಿತ್ತು. ಆಗ್ಲೇ ಮೇಷ್ಟ್ರು ತುಂಬಾ ಸಲ ಹೇಳಿದ್ದರು ಹದಿನೈದು ಮಾರ್ಕ್ಸಿನ ಪ್ರಶ್ನೆಗೆ ಉತ್ತರಿಸುವಾಗ ಕೊನೆಯ ಪಕ್ಷ ಒಂದು ಪುಟವಾದರೂ ಬರೆಯಲೇಬೇಕೆಂದು. ಪ್ರಶ್ನೆ ಕೇಳುವವರಿಗೆ ಕಾಮನ್ ಸೆನ್ಸ್ ಬೇಡವೇ ಅಂತ ಬಯ್ದುಕೊಳ್ಳುತ್ತಾ ಕೊನೆಗೆ ಒಂದು ಉಪಾಯ ಕಂಡುಕೊಂಡ.

"ಭೀಮನು ಧುರ್ಯೋಧನನನ್ನು ಗುದ್ದಿ ಗುದ್ದಿ ಗುದ್ದಿ ಗುದ್ದಿ....." ಹೀಗೆ ಬರೆಯುತ್ತಾ ಪುಟದ ಕೊನೆಗೆ ".... ಗುದ್ದಿ ಕೊಂದನು." ಹೀಗೆ ಮುಗಿಸಿದ!


-
(ಕೋಳಿಯನ್ನು( ನಗೆಸಾಮ್ರಾಟರನ್ನು) ಕೇಳದೇ ಅಲ್ಲಿ ಇಲ್ಲಿ ಮಾಡಿದ ಸಂಗ್ರಹಕ್ಕೆ ಮಸಾಲೆ ಅರೆದದ್ದು ರಂಜಿತ್.)

Thursday, April 2, 2009

ನೀವು ಓಟು ಹಾಕ್ತೀರಾ?

 

ಲೋಕಸಭೆಗೆ ಚುನಾವಣೆಗಳು ನಡೆಯುತ್ತಿವೆ. ಮನೆಯಲ್ಲಿ ಅಪ್ಪನಿಗೆ ರಾಜಕೀಯದ ಹುಚ್ಚು ಇದ್ದು ಬಿಟ್ಟರಂತೂ ಮುಗಿತೂ. ಅಪ್ಪನ ಪೇಪರು, ಟಿವಿ ನ್ಯೂಸ್ ಚಾನಲ್ಲುಗಳ ಮೂಲಕ ಮಕ್ಕಳಿಗೂ ಸಾಂಕ್ರಾಮಿಕವಾಗಿ ರಾಜಕೀಯದ ಹುಚ್ಚು ಹತ್ತಿ ಬಿಡುತ್ತದೆ. ಕ್ರಿಕೆಟ್ ಪ್ರೇಮ, ಧಾರಾವಾಹಿ ಮೋಹ, ರಾಜಕೀಯದ ಪ್ಯಾಶನ್ನು ಸಹ ಒಂದು ಜನರೇಶನ್ನಿನಿಂದ ಮತ್ತೊಂದಕ್ಕೆ ಬಳುವಳಿಯಾಗಿ ಬರುವ ಆಸ್ತಿಯಾಗಿದೆ.

ನಿಮಗೆ ಓಟು ಹಾಕುವ ಅರ್ಹತೆ ಬಂದಿದೆ ಎನ್ನುವುದಾದರೆ, ನಿಮಗೆ ಈಗಾಗಲೇ ಓಟು ಹಾಕಿರುವ ಅನುಭವವಿದೆಯೆನ್ನುವುದಾದರೆ ಇನ್ನೊಂದೆರಡು ನಿಮಿಷ ನಾವಿಲ್ಲಿ ಮಾತಾಡಬಹುದು. vote

ನಿಮ್ಮ ಮೊದಲ ಒಟು ಚಲಾವಣೆಯ ಅನುಭವ ಹೇಗಿತ್ತು ಎಂದು ಎಲ್ಲಾ ಪತ್ರಿಕೆಗಳು ಕೇಳುತ್ತವೆ. ಉತ್ತರ ಕೊಡಬೇಕಾದವರೆಲ್ಲರೂ ನಾನು ಯಾವ ಜಾತಿ ಅಭಿಮಾನವಿಲ್ಲದೆ, ಪಕ್ಷಪಾತವಿಲ್ಲದೆ, ಪೂರ್ವಾಗ್ರಹವಿಲ್ಲದೆ ಅಂತಃಸಾಕ್ಷಿ ಹೇಳಿದಂತೆ ಓಟು ಹಾಕಿದೆ ಎನ್ನುತ್ತಾರೆ. ಆದರೆ ಪ್ರತಿ ಸಲದ ಚುನಾವಣೆಯಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳ ಇತಿಹಾಸ ಹಾಗೂ ಸಾಧನೆ ಗಮನಿಸಿದರೆ ಮತ ಚಲಾಯಿಸಿದವರ ‘ಅಂತಃಸಾಕ್ಷಿ’ಯ ಬಗೆಗೇ ಸಂಶಯ ಹುಟ್ಟುತ್ತದೆ.

ಅದೇನೇ ಇರಲಿ, ನಮ್ ಕಾಫಿ ಕ್ಲಬ್ಬಲ್ಲಿ ಕಾಫಿ ಘಮದ ಜೊತೆಗೆ ಚುನಾವಣೆ ಬಿಸಿಯನ್ನೂ ಸೇರಿಸೋಣ ಎನ್ನುವ ಆಲೋಚನೆ ನಮ್ಮದು. ಜೊತೆಗೆ  ಬೇಸಿಗೆ ಬೇರೆ ಮೆಲ್ಲಗೆ ಶುರುವಾಗುತ್ತಿದೆ. ಬಿಸಿ ಅಧಿಕವಾದರೆ ತಿಳಿಸಿ, ಸಾಸರು ಬಳಸಿ.

ನೀವು ಓಟು ಹಾಕುವುದು ಪಕ್ಷವನ್ನು ನೋಡಿಯೋ ಅಥವಾ ನಿಮ್ಮ ಮತಕ್ಷೇತ್ರದ ಅಭ್ಯರ್ಥಿಯ ಸಾಧನೆಯ ಬಗ್ಗೆ ತಿಳಿದುಕೊಂಡೋ? ಮತ ಹಾಕುವುದು ಪಕ್ಷದ ಹೆಸರು ನೋಡಿ ಎನ್ನುವುದಾದರೆ ಆ ಪಕ್ಷದ ಬಗೆಗಿನ ಅಭಿಮಾನ ನಿಮಗೆ ಬೆಳೆದದ್ದು ಹೇಗೆ ಎಂದೂ ತಿಳಿಸಿ. ಏಕೆಂದರೆ ಒಂದೇ ಮನೆಯಲ್ಲಿ ನಾಲ್ಕು ಮಂದಿ ಓಟು ಹಾಕುವವರಿದ್ದರೆ ಬಹುತೇಕ ಎಲ್ಲರೂ ಒಂದೇ ಪಕ್ಷಕ್ಕೆ ಹಾಕುವ ಪದ್ಧತಿ ಇರುತ್ತೆ. ಇನ್ನು ನಿಮ್ಮ ಕ್ಷೇತ್ರದಲ್ಲಿ ಚುನಾವಣೆಗೆ ನಿಂತ ಅಭ್ಯರ್ಥಿಗಳ ಬಗ್ಗೆ ನಿಮಗೇನು ಗೊತ್ತಿರುತ್ತೆ? ಅವರ ಬಗ್ಗೆ ತಿಳಿಯುವ ಪ್ರಯತ್ನವನ್ನು ಮಾಡುತ್ತೀರಾ?

ಹದವಾದ ಬಿಸಿಯ ಕಾಫಿಯ ಜೊತೆ ಲೋಕಾಭಿರಾಮದ ಈ ಹರಟೆಗೆ ಸ್ವಾಗತ...

Wednesday, April 1, 2009

ಕಾಫಿ ಕ್ಲಬ್ಬಿಗೆ ಬೀಗ

 

ವ್ಯಾಲಂಟೈನ್ ಡೇ ಸಂದರ್ಭದಲ್ಲಿ ನಾಡಿನ ಪ್ರಮುಖ ಸಂಘಟನೆಯ ವಿರುದ್ಧ ಕೆಲವು ಅವಹೇಳನಕಾರಿ ಪ್ರತಿಕ್ರಿಯೆಗಳನ್ನು, ಹೇಳಿಕೆಗಳನ್ನು ಪ್ರಕಟಿಸಿದ್ದೇವೆ ಎಂಬ ಕಾರಣಕ್ಕೆ ‘ಕಾಫಿ ಕ್ಲಬ್’ನ ಮೇಲೆ ಆ ಸಂಘಟನೆಯ ಕಣ್ಣು ಬಿದ್ದಿತ್ತು. ನಮ್ಮ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸುವ ಸಂಬಂಧ ಆ ಸಂಘಟನೆ ನಡೆಸುತ್ತಿದ್ದ ಪ್ರಯತ್ನಗಳನ್ನು ಇಷ್ಟು ದಿನ ನಾವು ಮೌನವಾಗಿ ಗಮನಿಸುತ್ತಿದ್ದೆವು. ಹೀಗಾಗಿ ಕ್ಲಬ್ಬಲ್ಲಿ ಹೆಚ್ಚಿನ ಚರ್ಚೆ ನಡೆದಿರಲಿಲ್ಲ.

ಈಗ ನ್ಯಾಯಾಲಯದಲ್ಲಿ ಕೇಸು ಕಡೆಯ ಹಂತಕ್ಕೆ ಬಂದಿದೆ. ಒಂದು ಜವಾಬ್ದಾರಿಯುತ ಸಂಘಟನೆಯ ಬಗ್ಗೆ, ಗೌರವಯುತ ಸಂಘಟಕನ ಬಗ್ಗೆ ಅವಹೇಳನಕಾರಿಯಾಗಿ ಬ್ಲಾಗಿನಲ್ಲಿ ಬರೆದದ್ದು ತಪ್ಪೆಂದು ನ್ಯಾಯಾಲಯ ತೀರ್ಪಿತ್ತಿದೆ. ತತ್ಸಂಬಂಧ ಈ ಬ್ಲಾಗಿನ ಮಾಲೀಕರನ್ನು, ಬರಹಗಾರರನ್ನೂ ವಾಗ್ದಂಡನೆಗೆ ಗುರಿ ಮಾಡಿ, ಅವರಿಂದ ಬೇಷರತ್ ಕ್ಷಮೆಯನ್ನು ಪಡೆಯುವ, ಬ್ಲಾಗನ್ನು ಮುಚ್ಚುವ ಕ್ರಮ ಕೈಗೊಳ್ಳಲು ಆದೇಶ ಹೊರಡಿಸಲಾಗಿದೆ.

ಈ ಕಡೆಯ ಪೋಸ್ಟಿನಲ್ಲಿ, ಈ ಬ್ಲಾಗಿನ ಮಾಲೀಕನಾದ ನಾನು ಸುಪ್ರೀತ್.ಕೆ.ಎಸ್ ಆ ಸಂಘಟನೆಯ ಹಾಗೂ ಅದರ ಮುಖಂಡರ ಕ್ಷಮೆಯಾಚಿಸುವೆ. ಇನ್ನು ಮುಂದೆ ಇಂತಹ ಯಾವ ಕೆಲಸವನ್ನೂ ಮಾಡುವುದಿಲ್ಲ ಎಂದು ಮುಚ್ಚಳಿಕೆ ನೀಡುವೆ.

ವಿ.ಸೂ: ಈ ಬ್ಲಾಗಿನಲ್ಲಿ ಇನ್ನು ಮುಂದೆ ಯಾವುದೇ ಬರಹ ಪ್ರಕಟವಾಗೋದಿಲ್ಲ.

Wednesday, February 25, 2009

ಬ್ಲಾಗ್ ಯಾಕೆ ಬರೆಯಬೇಕು?

ರವಿ ಬೆಳೆಗೆರೆ, ಜೋಗಿ ಬಗ್ಗೆ ಬರೆಯುತ್ತ ನಯಾಪೈಸೆ ಲಾಭವಿಲ್ಲದ ಬ್ಲಾಗೂ ನಡೆಸುತ್ತಾನೆ ಎಂದು ಬರೆದಿದ್ದರು. ವಿಶ್ವೆಶ್ವರ ಭಟ್ಟರೂ ಬ್ಲಾಗಿಗೆ ಬರೆಯುವುದು ಸಮಯ ಹಾಳು ಎಂಬಂಥ ಕಾಮೆಂಟ್ ಮಾಡಿದ್ದನ್ನು ಓದಿದ ನೆನಪು. ಅಲ್ಲಿ-ಇಲ್ಲಿ ಪ್ರಕಟವಾಗಿದ್ದನ್ನು ಬ್ಲಾಗಿಗೆ ಹಾಕುವುದರಲ್ಲಿ ಏನೂ ನಷ್ಟವಿಲ್ಲವಾದರೂ ಬ್ಲಾಗಿಗಾಗೇ ಬರೆಯುವುದು ಪ್ರಯೋಜನವಿಲ್ಲದ್ದಾ ಎಂಬ ಗೊಂದಲ ಹಲವು ಬಾರಿ ಮನದಲ್ಲಿ ಮೂಡುತ್ತಿತ್ತು. ಬ್ಲಾಗಿಲ್ಲದೇ ಹೋದರೆ ನಮ್ಮ ಮನದ ಭಾವನೆಗಳನ್ನೂ,ಸೃಜನಶೀಲತೆಯನ್ನೂ, ಅಭಿಪ್ರಾಯಗಳನ್ನು ಮಂಡಿಸಲು ಬೇರೆ ವೇದಿಕೆ ಯಾವುದಿದೆ? ಅವರಿಗಾದರೆ ಪತ್ರಿಕೆಯ ಮೂಲಕ ತೀರಿಸಿಕೊಳ್ಳಬಲ್ಲರು.

ಕನ್ನಡಪ್ರಭದಲ್ಲಿ ಕೆಲಸ ಮಾಡುವ ಜೋಗಿ ಬ್ಲಾಗಿಸುತ್ತಿದ್ದಾರೆಂದರೆ ಇದೂ ಒಂದು ಬೇರೆಯೇ ತೆರನಾದ ಮಾಧ್ಯಮ ಎಂಬ ಅರಿವು ಅವರಿಗೂ ಇದ್ದಿರಬಹುದು ಅಲ್ಲದೇ ಅವರಂಥವರೇ ಬ್ಲಾಗಿಸುತ್ತಿರುವಾಗ ನಮಗೂ ಇದು ಒಳ್ಳೆಯ ಅಭಿವ್ಯಕ್ತಿಯ ಪ್ಲಾಟ್ ಫಾರಮ್ ಅನ್ನುವುದರಲ್ಲಿ ಅನುಮಾನವೇ ಬೇಡ ಎಂಬ ಭಾವನೆ ಮೂಡಿ ಬ್ಲಾಗಿಸಲು ಉತ್ಸಾಹ ಹುಟ್ಟುತ್ತಿತ್ತು. ಅಮಿತಾಭ್ ಬಚ್ಚನ್ ಗೆ ಬ್ಲಾಗು ಬರೆಯಲು 110 ಕೋಟಿ ನೀಡಿದ ಸುದ್ಧಿ ಕೇಳಿಯಂತೂ ನಮ್ಮ ಬ್ಲಾಗೂ ಓದಿ ಯಾರಾದರೂ ಅದಕ್ಕಿಂತ ಹೆಚ್ಚು ಕೊಡಲು ಮುಂದೆ ಬರುವ ಸಾಧ್ಯತೆ ಇಲ್ಲದಿಲ್ಲ ಎಂಬ ಹಗಲುಗನಸುಗಳೂ ದಂಡಿಯಾಗಿ ಬರತೊಡಗುತ್ತಿತ್ತು.

ಆದರೆ ಅವರೂ ರವಿಯ, ಭಟ್ಟರ ಮಾತಿಗೆ ಒಪ್ಪುವವರಂತೆ ಬ್ಲಾಗಿನಂಗಡಿ ಮುಚ್ಚಿ ಕನ್ನಡಪ್ರಭದ ಶಾಪಿಂಗ್ ಮಾಲ್ ನಲ್ಲೇ ಕುಳಿತರು.
ಒಳಗೆ ಕುಳಿತಿದ್ದ ಗೊಂದಲ ಮತ್ತೆ ನುಂಗಲು ಬಾಯ್ತೆರೆಯಿತು.

ಹೀಗೆ ದೊಡ್ಡೋರೆಲ್ಲಾ ಬ್ಲಾಗಿನಿಂದ ಪ್ರಯೋಜನವಿಲ್ಲ; ಮೂರ್ಕಾಸೂ ಹುಟ್ಟದ ಚಾಳಿ ಅನ್ನುತ್ತಿದ್ದರೆ ದಿನ ದಿನ ಬ್ಲಾಗು ಓದುವವರಿಗೆ, ಬರೆಯುವವರಿಗೆ ಕಡೆಯ ಪಕ್ಷ ಸುಮ್ಮನೆ ಕಾಫಿ ಕುಡಿಯುತ್ತಿದ್ದ ಸಮಯದಲ್ಲಾದರೂ ಆಲೋಚನೆ ಬಂದಿರುತ್ತೆ. ಮನದೊಳಗೆ ಚಿಂತನೆ ನಡೆದಿರುತ್ತೆ. ಒಂದು ಅಭಿಪ್ರಾಯ ಮೂಡಿರುತ್ತೆ.

ಯಾರೇನೇ ಅಂದರೂ ಇದು ಭಾರತ; ಇಲ್ಲಿ ಜನತೆಯೇ ಜನಾರ್ಧನ. ಜಾಸ್ತಿ ಜನ ಹೇಳುವುದೇ,ಒಪ್ಪಿಕೊಳ್ಳುವುದೇ ಸತ್ಯ. ನಿಮ್ಮ ಅಭಿಪ್ರಾಯವನ್ನೂ ಹೀಗೆ ಸುಮ್ಮನೆ ಲೈಟ್ ಆಗಿ ಹಂಚಿಕೊಳ್ಳಿ. ಡಿಕಾಕ್ಷನ್ನು ಸ್ವಲ್ಪ ಕಮ್ಮಿ ಇರಲಿ.

Friday, February 20, 2009

ಕಾಫಿ ಕ್ಲಬ್ಬು ಕೆಂಡ ಸಂಪಿಗೇಲಿ


ಕಾಫಿ ಕ್ಲಬ್ಬಿನಲ್ಲಿ ನಮಗೆ ಒಂದು ನಯಾಪೈಸೆ ವರಮಾನವಿಲ್ಲದ್ದರಿಂದ ನಮ್ಮಿಂದ ಜಾಹೀರಾತುದಾರರಿಗೆ, ನಮ್ಮ ಕಾಫಿ ಕ್ಲಬ್ಬನ್ನು ಹೊಗಳುವುದಕ್ಕೆ, ಗಿರಾಕಿಗಳನ್ನು ಸೂಜಿಗಲ್ಲಿನಂತೆ ಸೆಳೆಯುವುದಕ್ಕೆ ತಮ್ಮ ಶಬ್ಧ ಪಾಂಡಿತ್ಯವನ್ನು ಮಸೆಯುತ್ತ ಕುಳಿತ ಬುದ್ಧಿವಂತರಿಗೆ ಕೆಲಸವಿಲ್ಲದಂತಾಗಿದೆ. ರಿಸೆಷನ್ ಎಂಬ ಸಂಕಟಕ್ಕೆ ನಮ್ಮದೂ ಚೂರು ಕಾಣಿಕೆ ಈ ರೀತಿ ಸಂದಾಯವಾಗುತ್ತಿದೆ.

ಆದರೆ ಓದುವವರೇ ಇಲ್ಲದೇ ಬರೆಯುವವರು ಈ ಭೂಮಿಯ ಮೇಲೆ ಇರುವ ತನಕ ಬರೆಯುವವರನ್ನೆಲ್ಲಾ ಪ್ರೋತ್ಸಾಹಿಸುವವರು ಬೆನ್ನ ಮೇಲೆ ಏಟು ಹಾಕುವವರು (ಮೆಚ್ಚುಗೆಗೋ, ಅವರು ಕೊಡುವ ಕಾಟ ಸಹಿಸದೆಯೋ) ಇದ್ದೇ ಇರುತ್ತಾರೆ.

ನಮ್ಮ ಕಾಫಿ ಕ್ಲಬ್ಬಿಗೆ ಕೆಂಡ ಸಂಪಿಗೆ ಶುಭಾಶಯ ಕೋರಿದ್ದಾರೆ. ಅವರೇನೋ ಎಲ್ಲಾ ಬ್ಲಾಗುಗಳ ಬಗ್ಗೆ ಬರೆದು ಪುಕ್ಕಟೆ ಪಬ್ಲಿಸಿಟಿ ಕೊಡುತ್ತಾರೆ. ಅದರಲ್ಲೇನು ವಿಶೇಷ ಎಂದು ಕಾಫಿ ಕುಡಿಯದೆ ಸಕ್ಕರೆ ಕಮ್ಮಿಯಿದೆ ಎನ್ನುವ ಸಿನಿಕರಿಗೆ ಕಮ್ಮಿಯಿಲ್ಲ. ಬ್ಲಾಗು ತೆರೆದ ಮೇಲೆ ಒಂದಲ್ಲ ಒಂದು ದಿನ ಕೆಂಡ ಸಂಪಿಗೆಯಲ್ಲಿ ಕಾಣಬೇಕು ಎಂದು ಸಂಶೋಧನಾ ಪ್ರಬಂಧ ಮಂಡಿಸುವ ಪಂಡಿತರಿಗೂ ಕೊರತೆಯಿಲ್ಲ. ಆದರೆ ಸರಿಯಾಗಿ ಮುನ್ನೂರ ಅರವತ್ತೈದು ದಿನಗಳಿಗೊಮ್ಮೆ (ಫೆ ೨೯ಕ್ಕೆ ಹುಟ್ಟಿದವರನ್ನು ಬಿಟ್ಟು) ಬರ್ತ್ ಡೇ ಬರುತ್ತದೆಂದು ತಿಳಿದಿದ್ದರೂ ಆ ದಿನ ಸಂಭ್ರಮಿಸದೆ, ಅಟ್ಲೀಸ್ಟ್ ಸಂಭ್ರಮಿಸುವ ನಾಟಕವಾಡದೆ ಇರಲಾದೀತೇ? ಇಲ್ಲ ಅಲ್ಲವೇ?

ಅದಕ್ಕೆ ನಮ್ಮದು ಇಷ್ಟು ಸಂಭ್ರಮ! ಈ ಕಾಫಿ ಕಪ್ಪಿನೊಳಗಿಲ್ಲದ ಜ್ಞಾನೋದಯ ನಿಮಗೆ ಹಿಮಾಲಯದಲ್ಲೂ ಸಿಕ್ಕುವುದಿಲ್ಲ.

Wednesday, February 18, 2009

ನೀವು ಡೈರಿ ಬರೀತೀರಾ?

diary ದಿನಚರಿ ಬರೆಯುವುದನ್ನು ಅನೇಕರು ಹವ್ಯಾಸದ ಹಾಗೆ, ಕೆಲವರು ವ್ರತದ ಹಾಗೆ, ಕೆಲವರು ಮಹಾ ಸಾಹಸದ ಹಾಗೆ ಭಾವಿಸುತ್ತಾರೆ. ದಿನಚರಿಯೆಂಬುದು ತೀರಾ ಖಾಸಗಿಯಾದ ಸಂಗತಿಯಾದ್ದರಿಂದ ಅದರಲ್ಲಿ ಏನಿರಬೇಕು, ಏನಿರಬಾರದು ಎಂದು ಸಾರ್ವಜನಿಕವಾಗಿ ಚರ್ಚಿಸುವುದು ಅನುಪಯುಕ್ತ.

ಡೈರಿ ಬರೆಯುವುದರಿಂದ ಕೈ ಬರಹ ದುಂಡಗಾಗುತ್ತೆ, ಕೆಲ ಸಮಯ ಮನಸ್ಸು ಏಕಾಗ್ರವಾಗಿರುತ್ತೆ, ಪೆನ್ನು, ಶಾಹಿ, ಡೈರಿ ಮಾರುವ ಸ್ಟೇಷನರಿ ಅಂಗಡಿಯವನಿಗೆ ಲಾಭವಾಗುತ್ತದೆ ಎಂಬೆಲ್ಲಾ ‘ಪ್ರಮುಖ’ ಸಂಗತಿಗಳನ್ನು ಬಿಟ್ಟು ದಿನಚರಿ ಬರೆಯುವುದರಿಂದ ನೀವು ಕಂಡುಕೊಂಡಿರುವ ಅನುಕೂಲಗಳೇನು, ಅದು ನಿಮಗೆ ಒದಗಿಸಿದ ಕಂಫರ್ಟ್ ಎಂಥದ್ದು, ಡೈರಿ ನಿಮ್ಮ ಬದುಕನ್ನು ರೂಪಿಸಿಕೊಳ್ಳುವುದರಲ್ಲಿ ನೀಡಿದ ನೆರವಿನ ಬಗ್ಗೆ ಚುಟುಕಾಗಿ ಬಿಸಿ ಕಾಫಿ ಹೀರುತ್ತ ಹರಟಿದ ಹಾಗೆ ಬರೆಯುತ್ತೀರಾ?

ಇದು ಕಾಫಿ ಕ್ಲಬ್ಬು. ಇಲ್ಲಿ ಫಾರ್ಮಾಲಿಟಿ ಬೇಕಿಲ್ಲ. ಮುಕ್ತವಾಗಿ ಮಾತಾಡಿ... 

Friday, February 6, 2009

ನಮ್ ಕಾಫಿ ಕ್ಲಬ್ ಕನ್ನಡ ಪ್ರಭಾದಲ್ಲಿ!


ನಮ್ ಕಾಫಿ ಕ್ಲಬ್ಬಿಗೆ ಮಂಗಳೂರಿನ ಪಬ್ಬಿಗೆ ಸಿಕ್ಕಷ್ಟು ಪ್ರಚಾರ ಸಿಕ್ಕಬೇಕು ಎಂಬುದು ನಮ್ಮ ದುರಾಸೆಯಲ್ಲ. ಕಾಫಿ ಕಂಪು ಹರಡಿದಷ್ಟೇ ನಿಶ್ಯಬ್ಧವಾಗಿ ಕ್ಲಬ್ಬಿನ ಮಾತೂ ಹರಡಬೇಕು ಅನ್ನೋದು ನಮ್ಮ ಆಸೆ. ಈ ಆಸೆ ಇಷ್ಟು ಬೇಗ ಪೂರ್ಣವಾಗುತ್ತೆ ಅಂತ ಗೊತ್ತಿದ್ರೆ ಕಾಣದ ದೇವರಿಗೆ ಕೈಮುಗಿಯುವ ಕಷ್ಟ ಇರ್ತಿರ್ಲಿಲ್ಲ.
ಕನ್ನಡದ ಬ್ಲಾಗುಗಳನ್ನು ಪರಿಚಯಿಸಿ ಪ್ರೋತ್ಸಾಹಿಸುತ್ತಿರುವ ಕನ್ನಡಪ್ರಭ, ಇದೀಗ ತಾನೆ ಕಣ್ತೆರೆಯುತ್ತಿರುವ
ನಮ್ ಕಾಫೀ ಕ್ಲಬ್ಬನ್ನೂ ಪರಿಚಯಿಸಿದೆ.

ಕನ್ನಡಪ್ರಭದಲ್ಲಿ ಕಾಫೀ ಕ್ಲಬ್ಬಿನ ಲೇಖನಕ್ಕೆ ಈ ಲಿಂಕ್ ಕ್ಲಿಕ್ಕಿಸಿ.
http://www.kannadaprabha.com/News.asp?Topic=114&Title=%86%DB%C7V%DB%BE%DA%DFy&ID=KPO20090204144139&nDate=


ವ್ಯಾಲಂಟೈನ್ಸ್ ಡೇ ಆಚರಣೆ ಬೇಕಾ?

 

SANY0332ನಮ್ ಕಾಫಿ ಕ್ಲಬ್ಬಿನಲ್ಲಿ ಈ ರೀತಿಯದೊಂದು ಚರ್ಚೆ ಶುರುವಾಗಿದೆ. 
ಇಲ್ಲೇ ಪಕ್ಕದಲ್ಲಿ ಒಂದು ಪೋಲ್ ಇದೆ ನಿಮ್ ಓಟು ಚಲಾಯಿಸಿ, ಜಾಗೋ!
ಇದ್ರ ಬಗ್ಗೆ ಮಾತಾಡ್ಬೇಕು ಅನ್ನೋರು ಇಲ್ಲಿ ಕಮೆಂಟು ಬರೆದು ಹಾಕಿ.
ಚರ್ಚೆಯಿಂದ ಯಾವ ದೇಶವೂ ಉದ್ಧಾರವಾದ ಉದಾಹರಣೆ ಫೆ ೬, ೨೦೦೯ರ ವರೆಗೆ ಒಂದೂ ಕಂಡು ಬಂದಿಲ್ಲ. ಹೀಗಾಗಿ ಉದ್ದುದ್ದ  ಬರೆದು ನಿಮ್ಮನ್ನು ಇತರರನ್ನು ಹಿಂಸಿಸಬೇಡಿ.
ಚುಟುಕಾಗಿ, ಮೊನಚಾಗಿ ನಾಲ್ಕು ಸಾಲು ಗೀಚಿ, ಕಾಫಿ ಹಬೆ ಆರುವುದರೊಳಗೆ!