Wednesday, February 25, 2009

ಬ್ಲಾಗ್ ಯಾಕೆ ಬರೆಯಬೇಕು?

ರವಿ ಬೆಳೆಗೆರೆ, ಜೋಗಿ ಬಗ್ಗೆ ಬರೆಯುತ್ತ ನಯಾಪೈಸೆ ಲಾಭವಿಲ್ಲದ ಬ್ಲಾಗೂ ನಡೆಸುತ್ತಾನೆ ಎಂದು ಬರೆದಿದ್ದರು. ವಿಶ್ವೆಶ್ವರ ಭಟ್ಟರೂ ಬ್ಲಾಗಿಗೆ ಬರೆಯುವುದು ಸಮಯ ಹಾಳು ಎಂಬಂಥ ಕಾಮೆಂಟ್ ಮಾಡಿದ್ದನ್ನು ಓದಿದ ನೆನಪು. ಅಲ್ಲಿ-ಇಲ್ಲಿ ಪ್ರಕಟವಾಗಿದ್ದನ್ನು ಬ್ಲಾಗಿಗೆ ಹಾಕುವುದರಲ್ಲಿ ಏನೂ ನಷ್ಟವಿಲ್ಲವಾದರೂ ಬ್ಲಾಗಿಗಾಗೇ ಬರೆಯುವುದು ಪ್ರಯೋಜನವಿಲ್ಲದ್ದಾ ಎಂಬ ಗೊಂದಲ ಹಲವು ಬಾರಿ ಮನದಲ್ಲಿ ಮೂಡುತ್ತಿತ್ತು. ಬ್ಲಾಗಿಲ್ಲದೇ ಹೋದರೆ ನಮ್ಮ ಮನದ ಭಾವನೆಗಳನ್ನೂ,ಸೃಜನಶೀಲತೆಯನ್ನೂ, ಅಭಿಪ್ರಾಯಗಳನ್ನು ಮಂಡಿಸಲು ಬೇರೆ ವೇದಿಕೆ ಯಾವುದಿದೆ? ಅವರಿಗಾದರೆ ಪತ್ರಿಕೆಯ ಮೂಲಕ ತೀರಿಸಿಕೊಳ್ಳಬಲ್ಲರು.

ಕನ್ನಡಪ್ರಭದಲ್ಲಿ ಕೆಲಸ ಮಾಡುವ ಜೋಗಿ ಬ್ಲಾಗಿಸುತ್ತಿದ್ದಾರೆಂದರೆ ಇದೂ ಒಂದು ಬೇರೆಯೇ ತೆರನಾದ ಮಾಧ್ಯಮ ಎಂಬ ಅರಿವು ಅವರಿಗೂ ಇದ್ದಿರಬಹುದು ಅಲ್ಲದೇ ಅವರಂಥವರೇ ಬ್ಲಾಗಿಸುತ್ತಿರುವಾಗ ನಮಗೂ ಇದು ಒಳ್ಳೆಯ ಅಭಿವ್ಯಕ್ತಿಯ ಪ್ಲಾಟ್ ಫಾರಮ್ ಅನ್ನುವುದರಲ್ಲಿ ಅನುಮಾನವೇ ಬೇಡ ಎಂಬ ಭಾವನೆ ಮೂಡಿ ಬ್ಲಾಗಿಸಲು ಉತ್ಸಾಹ ಹುಟ್ಟುತ್ತಿತ್ತು. ಅಮಿತಾಭ್ ಬಚ್ಚನ್ ಗೆ ಬ್ಲಾಗು ಬರೆಯಲು 110 ಕೋಟಿ ನೀಡಿದ ಸುದ್ಧಿ ಕೇಳಿಯಂತೂ ನಮ್ಮ ಬ್ಲಾಗೂ ಓದಿ ಯಾರಾದರೂ ಅದಕ್ಕಿಂತ ಹೆಚ್ಚು ಕೊಡಲು ಮುಂದೆ ಬರುವ ಸಾಧ್ಯತೆ ಇಲ್ಲದಿಲ್ಲ ಎಂಬ ಹಗಲುಗನಸುಗಳೂ ದಂಡಿಯಾಗಿ ಬರತೊಡಗುತ್ತಿತ್ತು.

ಆದರೆ ಅವರೂ ರವಿಯ, ಭಟ್ಟರ ಮಾತಿಗೆ ಒಪ್ಪುವವರಂತೆ ಬ್ಲಾಗಿನಂಗಡಿ ಮುಚ್ಚಿ ಕನ್ನಡಪ್ರಭದ ಶಾಪಿಂಗ್ ಮಾಲ್ ನಲ್ಲೇ ಕುಳಿತರು.
ಒಳಗೆ ಕುಳಿತಿದ್ದ ಗೊಂದಲ ಮತ್ತೆ ನುಂಗಲು ಬಾಯ್ತೆರೆಯಿತು.

ಹೀಗೆ ದೊಡ್ಡೋರೆಲ್ಲಾ ಬ್ಲಾಗಿನಿಂದ ಪ್ರಯೋಜನವಿಲ್ಲ; ಮೂರ್ಕಾಸೂ ಹುಟ್ಟದ ಚಾಳಿ ಅನ್ನುತ್ತಿದ್ದರೆ ದಿನ ದಿನ ಬ್ಲಾಗು ಓದುವವರಿಗೆ, ಬರೆಯುವವರಿಗೆ ಕಡೆಯ ಪಕ್ಷ ಸುಮ್ಮನೆ ಕಾಫಿ ಕುಡಿಯುತ್ತಿದ್ದ ಸಮಯದಲ್ಲಾದರೂ ಆಲೋಚನೆ ಬಂದಿರುತ್ತೆ. ಮನದೊಳಗೆ ಚಿಂತನೆ ನಡೆದಿರುತ್ತೆ. ಒಂದು ಅಭಿಪ್ರಾಯ ಮೂಡಿರುತ್ತೆ.

ಯಾರೇನೇ ಅಂದರೂ ಇದು ಭಾರತ; ಇಲ್ಲಿ ಜನತೆಯೇ ಜನಾರ್ಧನ. ಜಾಸ್ತಿ ಜನ ಹೇಳುವುದೇ,ಒಪ್ಪಿಕೊಳ್ಳುವುದೇ ಸತ್ಯ. ನಿಮ್ಮ ಅಭಿಪ್ರಾಯವನ್ನೂ ಹೀಗೆ ಸುಮ್ಮನೆ ಲೈಟ್ ಆಗಿ ಹಂಚಿಕೊಳ್ಳಿ. ಡಿಕಾಕ್ಷನ್ನು ಸ್ವಲ್ಪ ಕಮ್ಮಿ ಇರಲಿ.

15 comments:

  1. ನಾನು ಬ್ಲಾಗು ಬರೆಯೋದಕ್ಕೆ ಮುಖ್ಯ ಕಾರಣ. ನನ್ನ ಬರವಣಿಗೆ ಎಲ್ಲಾದರೂ ಬೆಳಕು ಕಾಣಬೇಕು ಎಂಬ ತುಡಿತದಿಂದ. ನಾವು ಬರೆದ ಚಿತ್ರವಾಗಲಿ, ನಮ್ಮ ಕಲ್ಪನೆಯ ಕಥೆಯಾಗಲಿ, ಕವನವಾಗಲಿ ಸಹಮನಸ್ಕರ ಮೆಚ್ಚುಗೆಯನ್ನು ಅಪೇಕ್ಷಿಸುತ್ತದೆ.
    ಅಪ್ರೈಸಲ್ ಗಾಗಿಯೇ ನಾವೆಲ್ಲಾ ಬ್ಲಾಗು ಬರೆಯೋದು. ಅದಕ್ಕೇ ನಮ್ಮ ಬರಹಕ್ಕೆ `ಹಿಟ್ಟು'ಗಳು ಸಿಕ್ಕದಿದ್ದರೆ, ಒಂದೂ ಕಮೆಂಟು ಬರದಿದ್ದರೆ ಬೇಸರವಾಗುವುದು. ಹೆಚ್ಚೆಚ್ಚು ಪ್ರತಿಕ್ರಿಯೆ ಬಂದರೆಲವಲವಿಕೆ ಕಾಣುವುದು.

    ReplyDelete
  2. "ಹಾಯ್.." ನಂತ ಪತ್ರಿಕೆನಲ್ಲಿ ಬರೆಯೋದು ಕೂಡ ಅವಮಾನಕರ ಮತ್ತು ಸಾಹಿತ್ಯಕ ಮೌಲ್ಯವಿಲ್ಲದ್ದೆಂಬ ಅಭಿಪ್ರಾಯ ಒಮ್ಮೆ ಇತ್ತು ( ಈಗಲು ಕೆಲವರಲ್ಲಿ ಇದೆ ). ಹಾಗೆ ಸದ್ಯಕ್ಕೆ ಬ್ಲಾಗ್ ಬರಹ ಪ್ರಯೋಜನವಿಲ್ಲದ್ದೆಂದು ಹಿಂದಿನ ಪೀಳಿಗೆಯವರಿಗೆ ಅನ್ನಿಸಬಹುದು. ಆದರೆ ಅಭಿಪ್ರಾಯ ಬದಲಾಗುತ್ತದೆ...ಕಾಲದೊಂದಿಗೆ. ಅಲ್ಲಿಯವರೆಗೆ ಬರೆಯೋರು ಬರೀತಾ ಇರಬೇಕು ಅಷ್ಟೆ.

    ReplyDelete
  3. ಸುಪ್ರೀತ್,

    ನಿಮ್ಮ ಮಾತಿಗೆ ನನ್ನ ಒಪ್ಪಿಗೆಯಿದೆ. "ನಾವು ಬೇರೆಯವರಿಗಾಗಿ,ಮೆಚ್ಚುಗೆಗಾಗಿ ಬರೆಯೋದಲ್ಲ.." ಎನ್ನುವ ವಿರಕ್ತ ಮಹಾಶಯರ ಮನಕ್ಕೆ ಕನ್ನಡಿ ಹಿಡಿದರೂ ಇದೇ ಸಾಲುಗಳು ಕಾಣುವುದು.

    ಆದರೆ ಮೆಚ್ಚುಗೆ ಸಿಗಬೇಕೆಂದರೆ ಬರವಣಿಗೆ ಚೆನ್ನಾಗಿರಬೇಕಂತಿಲ್ಲ."ನೀನು ನನಗೆ ಕಾಮೆಂಟ್ ಮಾಡಿದರೆ(ಹೊಗಳಿದರೆ) ನಾನು ನಿನಗೆ ಮಾಡ್ತೀನಿ" ಎಂಬ ಬಿಸಿನೆಸ್ ಬ್ಲಾಗಿಗರ ಮಧ್ಯೆ ನಡೆಯುತ್ತಿರುವುದು ಎಲ್ಲರ ಗಮನಕ್ಕೂ ಬಂದಿರುವ ವಿಷಯವೇ.

    -ರಂಜಿತ್

    ReplyDelete
  4. ಸಂತೋಷ್,

    ಜಯಂತ್ ಕಾಯ್ಕಿಣಿ ಸರ್‍ "ಹಾಯ್.." ಗೆ ಅಂಕಣ ಬರೆಯುತ್ತಿದ್ದಾಗ ತುಂಬ ಜನ " ನಿಮಗ್ಯಾಕೆ ಮಾಂಸದಂಗಡಿಯಲ್ಲಿ ಮಲ್ಲಿಗೆ ಮಾರುವ ಸ್ಥಿತಿ ಬಂದಿದೆ?" ಎಂದು ಆಡಿಕೊಂಡಿದ್ದರಂತೆ.

    ಕ್ರೈಮ್ ಪುಟಗಳನ್ನು ಹೊರತುಪಡಿಸಿದರೆ, ಜೋಗಿ, ಆಲೂರು, ನಾಗ್ತಿಹಳ್ಳಿ, ಕೆಲವು ಸಲ ರವಿ ಕೂಡ ಸಾಹಿತ್ಯಿಕವಾಗಿ ಬರೆಯೋದ್ರಿಂದ ನಾಲ್ಕೈದು ಪುಟ ಆದ್ರೂ ಒಳ್ಳೇ ಮನಸ್ಸಿಂದ ಓದ್ಬಹುದು. "ಹಾಯ್.." ಸಾಹಿತ್ಯಿಕ ಮೌಲ್ಯ ಪೂರ್ಣವಾಗಿ ಕಳೆದುಕೊಂಡಿಲ್ಲ.

    ಅವರ ಅಭಿಪ್ರಾಯ ಬದಲಾಗುತ್ತೆ ಅಂದಿರಿ.. ಆದರೆ ಬ್ಲಾಗು ಪ್ರಯೋಜನಕಾರಿಯಾ? ಅಥವಾ ನಿಷ್ಪ್ರಯೋಜಕವಾ ನಿಮ್ಮ ಅನಿಸಿಕೆ ತಿಳಿಸಲಿಲ್ಲ?:)

    ReplyDelete
  5. ರಂಜಿತ್,
    ಯಾರಿಗೆ ಏನು ಬೇಕೋ ಅದೇ ಸಿಕ್ಕುತ್ತೆ ಬಿಡಿ.
    ಅರಳುತ್ತಿರುವ ಪ್ರತಿಭೆಗೆ ವಸ್ತುನಿಷ್ಠವಾಗಿರದಿದ್ದರೂ ಸ್ವಲ್ಪ ಕಾಲ ಬೆಂಬಲದ, ಪ್ರೋತ್ಸಾಹದಆವಶ್ಯಕತೆ ಇರುತ್ತೆ. ಆದರೆ ಮಾಡಿದೆಲ್ಲಕ್ಕೂ ಪ್ರೋತ್ಸಾಹ, ಹೊಗಳುವಿಕೆಯನ್ನು ಬಯಸುವವರು ತಮ್ಮ ಗೋರಿಯನ್ನು ತಾವೇ ತೋಡಿಕೊಳ್ಳುತ್ತಾರೆ.

    ReplyDelete
  6. ಸಂತೋಷ್ ಮುಗೂರು,
    ಬ್ಲಾಗು ಬರೆಯೋದಕ್ಕೆ ಕಾರಣ ನಾನು ಮುಂಚೆ ತಿಳಿಸಿದ ಹಾಗೆ ಇದೆಯಾದರೂ ಬರಹಗಾರರೆಲ್ಲರ ಸ್ಪೂರ್ತಿ ಇದೇ ಆಗಬೇಕೆಂತಿಲ್ಲ.
    ಪತ್ರಕರ್ತರು, ಬರಹಗಾರರು ಹಣಕ್ಕಾಗಿ ಬರೆಯುತ್ತಾರೆ ಎಂಬುದೇನು ಆಶ್ಚರ್ಯ ಪಡಬೇಕಾದ ವಿಚಾರವಲ್ಲ. ಅದು ಸಹಜ. ಬ್ಲಾಗಿಂದ ಒಂದೂ ಪೈಸೆಯೂ ಹುಟ್ಟುವುದಿಲ್ಲ ಎಂಬುದು ಅವರ ಸಹಜವಾದ ಆಪಾದನೆ. ಕೆಲವರು ಅದೆಷ್ಟು ಹಣದ ಸ್ಪೂರ್ತಿಯ ಹಿಂದೆ ಬಿದ್ದಿರುತ್ತಾರೆಂದರೆ, ಫ್ರೀಯಾಗಿ ಒಂದಕ್ಷರ ಬರೆಯಲೂ ಅವರಿಗೆ ಮನಸ್ಸು ಬರದು.
    ಕನ್ನಡದಲ್ಲೂ ಜಾಹೀರಾತು ಜಾಲವನ್ನು ಶುರುಮಾಡಿ ಜಾಹೀರಾತು ಹಾಕಲು ವ್ಯವಸ್ಥೆ ಮಾಡಿದರೆ ಖಂಡಿತವಾಗಿ ಬ್ಲಾಗ್ ಬರೆಯೋದಕ್ಕೆ ಸ್ಪೂರ್ತಿ ಹೆಚ್ಚುತ್ತದೆ!

    ಸುಪ್ರೀತ್

    ReplyDelete
  7. ಸುಪ್ರೀತ್ :
    "ಕನ್ನಡದಲ್ಲೂ ಜಾಹೀರಾತು ಜಾಲವನ್ನು ಶುರುಮಾಡಿ ಜಾಹೀರಾತು ಹಾಕಲು ವ್ಯವಸ್ಥೆ ಮಾಡಿದರೆ ಖಂಡಿತವಾಗಿ ಬ್ಲಾಗ್ ಬರೆಯೋದಕ್ಕೆ ಸ್ಪೂರ್ತಿ ಹೆಚ್ಚುತ್ತದೆ!"

    ನೀವು ಹೇಳುವ ಮಾತು ನಿಜವಾಗುವ ಸಾಧ್ಯಗಳು ಇಲ್ಲದಿಲ್ಲ. ಆಗ ನಾವು ನೀವು ಇನ್ನೊಂದು ಕಡೆ ಕೂತು ಮನಸ್ಸಿನಾಳದ ಮಾತು ಬ್ಲಾಗಿನಲ್ಲಿ ಬರ್ತಾ ಇಲ್ಲ ಅಂತ ಮಾತಾಡ್ತಾ ಕೂತಿರ್ತೀವಿ.

    ರಂಜಿತ್ :
    "ಬ್ಲಾಗು ಪ್ರಯೋಜನಕಾರಿಯಾ? ಅಥವಾ ನಿಷ್ಪ್ರಯೋಜಕವಾ ನಿಮ್ಮ ಅನಿಸಿಕೆ ತಿಳಿಸಲಿಲ್ಲ?:)"

    ನಿಮ್ಮ ಪ್ರಶ್ನೆಯ ನಂತರದ ಸ್ಮಿತೆ (smiley)ಯೆ ಅದಕ್ಕೆ ಉತ್ತರ ಕೊಡತ್ತೆ. ಪ್ರಯೋಜನವಾಗುವುದು ಬಿಡುವುದು ಬರೆಯುವ ಬರಹದಿಂದ. ಪ್ರತಿಯೊಂದು ಮಾಧ್ಯಮಕ್ಕು ಅದರದ್ದೆ ಆದ ವ್ಯಾಪ್ತಿ ( ಪ್ರಾಪ್ತಿ ಕೂಡ ) ಉಂಟು.

    ಇನ್ನು ಬ್ಲಾಗಬರಹ ಮತ್ತು ಬಿಸ್‍ನಸ್ ಕುರಿತು :
    "ನೀನು ನನಗೆ ಕಾಮೆಂಟ್ ಮಾಡಿದರೆ(ಹೊಗಳಿದರೆ) ನಾನು ನಿನಗೆ ಮಾಡ್ತೀನಿ" ಎಂಬ ಬಿಸಿನೆಸ್ ಬ್ಲಾಗಿಗರ ಮಧ್ಯೆ ನಡೆಯುತ್ತಿರುವುದು ಎಲ್ಲರ ಗಮನಕ್ಕೂ ಬಂದಿರುವ ವಿಷಯವೇ.

    ಇದೇನು ಹೊಸತಲ್ಲ ಅನಾದಿ ಕಾಲದಿಂದಲು ನಡೆದು ಬಂದಿರತಕ್ಕದ್ದು..ಹಿಂದೆ ಕನ್ನಡ ಸಾಹಿತ್ಯವಲಯದಲ್ಲು ಇದು ತೀವ್ರವಾಗಿ ಇದ್ದದ್ದು ಅದು ಶೀತಲಸಮರಕ್ಕು ಎಡೆಮಾಡಿಕೊಟ್ಟದ್ದು ಎಲ್ಲರಿಗು ತಿಳಿದಿರೋ ವಿಚಾರ !

    ಹಾಗಾಗಿ ಬರೆಯುವವರು ಬರೀತಾ ಹೋಗಬೇಕಸ್ಟೆ...ತಿರುಳಿಲ್ಲದ ಕವನಕ್ಕೆ ಬರುವ ಸಾವಿರ comments ಗಿಂತ ಒಳ್ಳೆಯ ಕವನಕ್ಕೆ ಬರುವ ಒಂದೆ ಒಂದು commentu ಹೆಚ್ಚು ಅನ್ನೋದು ನನ್ನ ಅಭಿಪ್ರಾಯ.

    ಶ್ರೀ ಅವರ ಕವನದ ಕೆಲ ಸಾಲುಗಳು ಹೀಗಿವೆ

    " ಅನ್ಯರೊರೆದುದನೆ, ಬರೆದುದನೆ ನಾ ಬರೆಬರೆದು
    ಬಿನ್ನಗಾಗಿದೆ ಮನವು; ಬಗೆಯೊಳಗನೇ ತೆರೆದು
    ನನ್ನ ನುಡಿಯೊಳೆ ಬಣ್ಣ ಬಣ್ಣದಲಿ ಬಣ್ಣಿಸುವ
    ಪನ್ನತಿಕೆ ಬರುವನಕ ನನ್ನ ಬಾಳಿದು ನರಕ "

    ಕವಿಯಲ್ಲಿ ಈ ಭಾವ ಇದ್ದದ್ದೆ ಆದಲ್ಲಿ ಬೇರೆಯವರ ಪ್ರತಿಕ್ರಿಯೆಗಿಂತ ತನ್ನನ್ನು ತಾನು ಮೆಚ್ಚಿಸಿಕೊಳ್ಳುವುದು ಮುಖ್ಯವಾಗುತ್ತಿದೆ. ಹಾಗಂದ ಮಾತ್ರಕ್ಕೆ ಇದೆ ಭಾವ ಎಲ್ಲರಲ್ಲು ಇರಬೇಕೆಂದೇನಲ್ಲ :)

    ಅಯ್ಯೋ ನಿಮ್ಮ ಕಾಫಿ ಬ್ಲಾಗನಲ್ಲಿ ಉದ್ದುದ್ದ comment ಬರೀ ಬಾರದು ಅಂತ ಓದಿದ್ದ ನೆನಪು. ಕ್ಷಮೆಯಿರಲಿ ...!

    ReplyDelete
  8. ಅಯ್ಯೋ ಕ್ಷಮಿಸಿ ಮೇಲಿರುವುದು ಶ್ರೀ ಯವರ ಕವನವಲ್ಲ..ಅಡಿಗರದ್ದು.

    ReplyDelete
  9. "ಬ್ಲಾಗ್ ಯಾಕೆ ಬರೀಬೇಕು?" ಅನ್ನುವುದು ಒಂಥರಾ "ಚಹಾ ಯಾಕೆ ಕುಡೀಬೇಕು?" ಅಂದಂತೆ. ಚಹಾ ಕುಡಿಯದಿದ್ರೆ ಏನೂ ಸತ್ತು ಹೋಗಲ್ವಲ್ಲಾ. ಅದರಿಂದ ಜಾಸ್ತಿ ಲಾಭ ಏನಿದೆ? ಸುಮ್ನೇ ಸ್ವಲ್ಪ ಹೊತ್ತು ಚಹಾದ(ಕಾಫಿಯೂ ಇರಬಹುದು) ಪ್ರಭಾವ ಸ್ವಲ್ಪ ಹೊತ್ತು ಇರಬಹುದು ಅಷ್ಟೇ. ಲಾಭ ಏನಿದೆ...
    ಹಾಗಂತ ಚಹಾ ಕುಡಿಯೋದು ಬಿಟ್ಟಿಲ್ಲ ಕಣ್ರೀ..! :-)

    ReplyDelete
  10. ಬ್ಲಾಗ್ ಯಾಕೆ ಬರೀಬೇಕು ಅನ್ನುವುದಕ್ಕೆ ಆರು ತಿಂಗಳ ಹಿಂದೆ ಕೇಳಿದ್ದರೆ "ಹೌದು ಯಾಕೆ ಬರೀಬೇಕು ಅದರಿಂದ ಪ್ರಯೋಜವವೇನು" ಅನ್ನುತ್ತಿದ್ದೆನೇನೋ ಈಗ ಕೇಳಿದರೆ ಏನು ಹೇಳಲಿ. ಅದು ನನ್ನ ಸಂಪೂರ್ಣ ಅಭಿವ್ಯಕ್ತಿ ಮಾದ್ಯಮ...ನಾನೇನೋ ಗೀಚುತ್ತಿದ್ದೆನೆಂದುಕೊಳ್ಳುತ್ತಲೇ....ಬೇರೆಯವರ ಬರವಣಿಗೆಯಿಂದ ಬೇಕಾದಷ್ಟು ಕಲಿಯಲು ಬ್ಲಾಗು ಬೇಕು...ನನ್ನ ಭಾಷೆ ಮತ್ತಷ್ಟು ಪರಿಶುದ್ಧಿಸಿಕೊಳ್ಳಲು ಬ್ಲಾಗ್ ಬೇಕು[ತಪ್ಪು ತಿದ್ದಲು ಗೆಳೆಯರಂಥ ಮೇಷ್ಟು ಇದ್ದೇ ಇರುತ್ತಾರಲ್ಲ]. ಬೇರೆ ಆಡ್ಡದಾರಿ ಹಿಡಿಯುವುದನ್ನು ತಪ್ಪಿಸಲು ಬ್ಲಾಗು ಬರೀಬೇಕು.....ಇದು ನನಗನ್ನಿಸಿದ್ದು....

    ReplyDelete
  11. ಪ್ರದೀಪ್,
    ಚೆನ್ನಾಗಿ ಹೇಳಿದ್ದೀರಿ.
    ಬ್ಲಾಗಿಂಗೆಂಬುದು ಒಂದು ನಿರುಪದ್ರವಿ ಹವ್ಯಾಸವಾಗಿದ್ದಷ್ಟೂ ಆಹ್ಲಾದಕರವಾಗುತ್ತೆ. ಕಾಫಿಯ ಹಾಗೆಯೇ!
    ಅತಿಯಾದರೆ ಅದು ಚಟವಾಗುತ್ತೆ, ಆರೋಗ್ಯ ಹಾನಿ, ಸಮಯ ಹಾಳು, ಮನಸ್ಸಿಗೆ ತೊಂದರೆ ಅಲ್ಲವೇ?

    ReplyDelete
  12. ಶಿವು,
    ಹುಂ, ಬ್ಲಾಗಿನ ಪಾಸಿಟಿವ್ ಅಂಶಗಳನ್ನು ಚೆನ್ನಾಗಿ ಪಟ್ಟಿ ಮಾಡಿದ್ದೀರಿ...

    ReplyDelete
  13. ಸಂತೋಷ್,

    ಲಾಂಗ್ ಅಂದ್ರೆ ಭಯ ಪಡೋದು ರೌಡಿಸ್ಮ್ ನಲ್ಲಿ ಮಾತ್ರ..:)

    ಕಾಫಿ ಕುಡೀತಾ ಗೆಳೆಯರು ಖಾಲಿಗ್ಲಾಸು ಇಟ್ಟ ಮೇಲೂ ಮತ್ತೂ ಒಂದಿಷ್ಟು ಹೊತ್ತು ಮಾತಾಡೋಕೆ ಬಯಸ್ತಾರಲ್ವಾ.. ಹಾಗೆ ಮಾಡಬಹುದು ಅನ್ಸುತ್ತೆ ಕಾಫಿ ಕ್ಲಬ್ಬಲ್ಲೂ.

    ReplyDelete
  14. ಹೌದ್ರೀ ಸುಪ್ರೀತ್...
    "ಅತಿಯಾದರೆ ಅಮೃತವೂ ವಿಷವೇ"

    ReplyDelete
  15. blog ennuvudu namma swanth vEdike. illi yaarannu kaaDi BeDi prakaTisi endu kElabEkaada prameyavill. namge thochiddannu nirbhayavaagi,prkaTisalu illi avakaashavide. blogige spandisuvavaru namma aaptataru. avara aarogyakara Teekeyannu naavu aahvaanisi namma dhoshavannu saripadisikollona. banni by two cofee kudiyoNa.

    ReplyDelete

ಕಾಫಿ ಕುಡೀತಾ ಹಂಗೇ ಒಂದಿಷ್ಟು ಮಾತಾಡಿ